ಐ ಫೋನ್ ಘಟಕದ ಮೇಲೆ ಕಾರ್ಮಿಕರಿಂದ ದಾಂಧಲೆ ಪ್ರಕರಣ: 50 ಕೋಟಿಗೂ ಅಧಿಕ ನಷ್ಟ; 210 ಮಂದಿ ಬಂಧನ | Janata news
ಕೋಲಾರ : ಜಿಲ್ಲೆಯ ನರಸಾಪುರದಲ್ಲಿರುವ ತೈವಾನ್ ಮೂಲದ ಐಫೋನ್ ಘಟಕದಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಕಾರಣಕ್ಕೆ ಸಾವಿರಾರು ಕಾರ್ಮಿಕರು ಸಿಟ್ಟಾಗಿ ಸರಿ ಸುಮಾರು 50 ಕೋಟಿ ಮೊತ್ತ ಆಸ್ತಿಪಾಸ್ತಿಗಳನ್ನು ನಾಶ ಪಡಿಸಿದ್ದರು.
ಕಳೆದೆರಡು ತಿಂಗಳಿಂದ ವೇತನವನ್ನ ಸರಿಯಾಗಿ ಗುತ್ತಿಗೆ ಪಡೆದ ಕಂಪನಿಯವರು ನೀಡುತ್ತಿಲ್ಲ ಎನ್ನುವ ಆರೋಪ ಕಾರ್ಮಿಕರು ಶುಕ್ರವಾರ ರಾತ್ರಿಯೇ ಮಾಡಿದ್ದರು. ಬೆಳಗ್ಗೆ 4.50 ಕ್ಕೆ ಆರಂಭವಾದ ಪ್ರತಿಭಟನೆಯಲ್ಲಿ ರಾತ್ರಿ ಪಾಳಯದ ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಹಾಗು ಬೆಳಗ್ಗೆ ಮೊದಲ ಶಿಪ್ಟ್ಗೆ ಆಗಮಿಸಿದ ಇನ್ನೂರಕ್ಕು ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸಿ, ಬಾಕಿಯಿರುವ ಎರಡು ತಿಂಗಳ ಸಂಬಳ ಹಾಗು ಹೆಚ್ಚುವರಿಯಾಗಿ ಮಾಡಿರುವ ಕೆಲಸದ ಹಣವನ್ನ ನೀಡುವಂತೆ ಆಗ್ರಹಿಸಿದ್ದಾರೆ.
15 ಸಾವಿರ ಸಂಬಳಕ್ಕೆಂದು ಕೆಲಸಕ್ಕೆ ಸೇರಿಸಿಕೊಂಡು 10-11 ಸಾವಿರ ಹಣ ಕೊಟ್ಟು ಯಾಮಾರಿಸ್ತಿದ್ದಾರೆ ಎನ್ನುವ ಆರೋಪಗಳು ಕಳೆದ ಒಂದು ತಿಂಗಳ ಹಿಂದೆ ಕೇಳಿಬಂದಿತ್ತು. ಈ ಬಗ್ಗೆ ಆಡಳಿತ ವಿಭಾಗದ ವಿರುದ್ದ ಮೊನ್ನೆ ರಾತ್ರಿಯಿಂದ ಪ್ರತಿಭಟನೆ ನಡೆಸಲು ಸಜ್ಜಾಗಿದ್ದ ನೌಕರರ ಆಕ್ರೋಶದ ಕಟ್ಟೆ ನಿನ್ನೆ ಬೆಳಗ್ಗೆ ಕಟ್ಟೆ ಒಡೆದು ದಾಂಧಲೆ ಮಾಡುವ ಹಂತಕ್ಕೆ ಹೋಗಿದೆ.
ಇನ್ನು ಕಂಪನಿಯ ಎರಡು ಮಹಡಿಯಲ್ಲೂ ಸಂಫೂರ್ಣವಾಗಿ ಗಾಜುಗಳು ಹಾಗು ಯಂತ್ರಗಳು ನಜ್ಜು ಗುಜ್ಜಾಗಿದ್ದು, ಒಟ್ಟು ನಷ್ಟ 50 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
ಘಟನೆಯಲ್ಲಿ ಅಪಾರ ಪ್ರಮಾಣದ ವಸ್ತುಗಳು ಕಳುವಾಗಿದೆ ಎನ್ನಲಾಗಿದೆ. ಆಪಲ್ ಕಂಪನಿಯ ಲ್ಯಾಪ್ಟಾಪ್, ಬೆಲೆಬಾಳುವ ಐಪೋನ್ ಬಿಡಿಭಾಗಗಳನ್ನ ಕಾಮಿರ್ಕರು ಕದ್ದಿರುವ ಆರೋಪವೂ ಕೇಳಿಬಂದಿದೆ.
200ಕ್ಕು ಹೆಚ್ಚು ಮಂದಿಯನ್ನ ಬಂಧಿಸಿದ್ದು, ತನಿಖೆ ನಡೆಸಿ ಎಲ್ಲಾ ಆರೋಪಿಗಳನ್ನ ಪತ್ತೆಹಚ್ಚಲು 10 ತಂಡ ರಚನೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಗಲಾಟೆಯಲ್ಲಿ 800 ಕಾರ್ಮಿಕರು ಭಾಗಿಯಾಗಿರುವ ಆರೋಪ ಇದೆ.
ಘಟನೆಯ ಬಗ್ಗೆ ಪ್ರಧಾನಿ ಮೋದಿಯವರ ಕಚೇರಿ, ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿದ್ದು, ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿ ಸತ್ಯಭಾಮರಿಗೆ ಕರೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದಾರೆ.